ದಾಂಡೇಲಿ : ತಾಲೂಕಿನ ಆಲೂರಿನಲ್ಲಿ ಸ್ಥಳೀಯ ರೈತರೊಬ್ಬರ ಕಬ್ಬಿನ ಗದ್ದೆಗೆ ಕಳೆದ ಎರಡ್ಮೂರು ದಿನಗಳಿಂದ ಕಾಡಾನೆ ದಾಳಿ ಮಾಡಿ, ಬೆಳೆ ಹಾನಿ ಮಾಡಿದೆ. ಬೆಳೆ ಹಾನಿಗೀಡಾದ ಸ್ಥಳಕ್ಕೆ ತಹಶೀಲ್ದಾರ್ ಶೈಲೇಶ ಪರಮಾನಂದ ಹಾಗೂ ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ್ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.
ಆಲೂರು ಗ್ರಾಮದ ರೈತ ವಿಷ್ಣು ಪಿಶಾಳಿ ಎಂಬುವರ ಕಬ್ಬಿನ ಗದ್ದೆಗೆ ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಕಾಡಾನೆ ದಾಳಿ ಮಾಡಿ ಬೆಳೆ ಹಾನಿ ಮಾಡಿದೆ. ಈ ನಿಟ್ಟಿನಲ್ಲಿ ತಹಶೀಲ್ದಾರ್ ಶೈಲೇಶ ಪರಮಾನಂದ ಹಾಗೂ ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ್ ಅವರು ಆಲೂರಿಗೆ ಭೇಟಿ ನೀಡಿ ಕಾಡಾನೆಯಿಂದ ಹಾನಿಗೀಡಾದ ಕಬ್ಬಿನ ಗದ್ದೆಯನ್ನು ವೀಕ್ಷಿಸಿದರು.
ರೈತ ವಿಷ್ಣು ಪಿಶಾಳಿ ತನಗಾದ ಹಾನಿಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಾಮನ ಮಿರಾಶಿ, ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಾರುತಿ ಕಾಂಬ್ರೇಕರ ಹಾಗೂ ಸ್ಥಳೀಯ ರೈತರು ಉಪಸ್ಥಿತರಿದ್ದು, ಆನೆ ದಾಳಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿ, ರೈತರ ಬೆಳೆ ರಕ್ಷಣೆಗೆ ಸೂಕ್ತ ರೀತಿಯ ಕ್ರಮವನ್ನು ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಸೂಚನೆಯನ್ನು ನೀಡುವಂತೆ ವಿನಂತಿಸಿದರು.